ನಿತ್ಯ ನೂತನ ಫೇಸ್ ಬುಕ್ ಕವಿಗಳಿಗೆ ನನ್ನ ನಮಸ್ಕಾರಗಳು.[ಇದು ನನ್ನನ್ನೂ ಸೇರಿ ಸ್ವಗತವೂ ಹೌದು]
ಚಂದ್ರ,ಚಕೋರಿ,ತುಂಡು ಲಂಗದ ಕಿಶೋರಿ, ಅದೇ ಪದಗಳನ್ನ
ತಿರುವಿ ತಿರುವೀ ಬರೆದು, ಚಿಂದಿ ಚಿತ್ರಾನ್ನ ಮಾಡಿ, ಧೀರ್ಘ ಉಸಿರೆಳೆದು, ಬೆರಳು ತುದಿಯಲ್ಲಿ ಮೂಗೊರಸಿ, ಮುಂದುದುರುವ ಲೈಕು, ಕಮೆಂಟುಗಳಿಗೆ ಕೆನ್ನೆ ಮೇಲೆ ಕೈ ಹೊತ್ತು ಕಾಯುವ ಮುನ್ನ,
ಎ,ಕೆ,ರಾಮನುಜಂ ನಂತಹ ಮಹಾನುಭಾವರ ಪುಸ್ತಕಗಳನ್ನ ಒಮ್ಮೆ ಓದಿ. ನಾವು ಪಕ ಪಕನೆ ಬರೆದದ್ದನ್ನೆಲ್ಲಾ ಪಾಯಖಾನೆಯಲ್ಲಿ ಹೋಗಿ ಕಕ್ಕುವಷ್ಟು ನಮಗೇ ಅಸಹ್ಯವಾಗಲಿಲ್ಲ ಅಂದರೆ ಕೇಳಿ.
ನಮ್ಮೆಲ್ಲರ ಮೂಲಭೂತ ಕೊರತೆ, ಅನ್ನಿಸಿದ್ದನ್ನ ಅರಿವಾಗುವಮುನ್ನವೇ ಅರಳಿಸಿ ಆಘ್ರಾಣಿಸಲು ಪ್ರಯತ್ನಿಸುವುದು. ಮನಸ್ಸಿನಲ್ಲಿ ಮೂಡುವ ಸಣ್ಣ ಸಣ್ಣ ಪಲಕು ಗಳನ್ನು ಅಲ್ಲೇ ನೆನೆಹಾಕಿ, ಕೊಳೆಹಾಕಿ ಮತ್ತೆ ಉಳಿಯುವ ಮೊತ್ತವನ್ನು ಇನ್ನೊಮ್ಮೆ ಪರಿಶೀಲಿಸಿ, ಇದರಿಂದ ಯಾವುದಾದರೂ ಭಾವದ ನಶೆ ಏರುವುದೇ ಎಂದು ಪರೀಕ್ಷಿಸಿ ಪ್ರಕಟಿಸುವುದು ಕನ್ನಡದ ಸಾಹಿತ್ಯದ ದೃಷ್ಠಿಯಿಂದ ಬಹಳ ಒಳ್ಳೆಯದು. ಜ್ಞಾನಕ್ಕೆ ಗಂಗಾ ಮಾತೇನೆ ಬೇಕೆ..ತಿಳಿದವರಿಗೆ ತಿಳಿನೀರೂ ತೀರ್ಥವೇ...ಮನಸ್ಸು ಮಾಘಿರಬೇಕು.
ರಾಮಾನುಜಂ ರವರ ಕೃತಿಗಳನ್ನ ಓದುತ್ತಾ ಇದ್ದೇನೆ. ಮಿಕ್ಕಿದ್ದು ಎಷ್ಟು ಬಾಲಿಷ ಅನ್ನಿಸುವಷ್ಟು ಬೇಜಾರಾಗಿದೆ.
ಅವರ ಕೆಲವು ಕವನಗಳನ್ನು ಹಂಚಿಕೊಳ್ಳುತಿದ್ದೇನೆ.
ಆಶ್ಚರ್ಯವೇನಿಲ್ಲ
ಈಗ ಸಣ್ಣಗೆ ನೋಯುತ್ತಿರುವ ಮೈ
ಒಳಗಿನ ಎಲುಬು
ಹೀಗೆ ಒಂದು ದಿನ
ಬಿಸಿಲಲ್ಲಿ ಬೆಳ್ಳಗೆ ಬಿಳಚಿಕೊಂಡು
ತುಟಿಯಿಲ್ಲದೆ ಹಲ್ಲು ಕಿರಿದು
ನಾಯಿಬಾಯಿಗೆ ಸಿಕ್ಕಿದರೆ
ಆಶ್ಚರ್ಯವೇನಿಲ್ಲ.
No comments:
Post a Comment